ಶುಕ್ರವಾರಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯ “ಮಕ್ಕಳ ಸಂತೆ ” ಗೆ ಹರಿದು ಬಂದ ಜನಸಾಗರ.
ಸಕಲೇಶಪುರ :- ತಾಲ್ಲೂಕಿನ ಕುರುಭತ್ತೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಶುಕ್ರವಾರಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಮಕ್ಕಳಿಂದ “ಮಕ್ಕಳ ಸಂತೆ ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಯೋಗೇಶ್ ಉದ್ಘಾಟನೆ ಮಾಡಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆಗೆ ಬಾಲ್ಯದಲ್ಲಿಯೇ ವ್ಯವಹಾರದ ಜ್ಞಾನವನ್ನು ಹಾಗೂ ಧೈರ್ಯವನ್ನು ರೂಪಿಸಿಕೊಳ್ಳಲು ಉಪಯೋಗವಾಗುವ ನಿಟ್ಟಿನಲ್ಲಿ ಇತರಹದ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಪ್ರತಿವರ್ಷದಂತೆ ಈ ವರ್ಷವೂ ಮಕ್ಕಳ ಸಂತೆಯನ್ನು ಅತ್ಯಂತ ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ” ಎಂದರು.
ಬೆಳಗ್ಗೆ 9 ಗಂಟೆಯಿಂದ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಶಾಲಾ ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ವಿವಿಧ ಬಗೆಯ ತರಕಾರಿ, ಹಣ್ಣುಗಳು ಹಾಗೂ ಮನೆಯಲ್ಲಿ ಮಾಡಿದ ವಿವಿಧ ಬಗೆಯ ಸಿಹಿ ತಿಂಡಿಗಳನ್ನು ತಂದು ಸರದಿ ಸಾರಿನಲ್ಲಿ ಇಟ್ಟು ಮಾರಿದರು. ಗ್ರಾಮಪಂಚಾಯಿತಿ ವ್ಯಾಪ್ತಿಯ ಅಕ್ಕಪಕ್ಕದ ಊರಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮಾರುತ್ತಿದ್ದ ತರಕಾರಿಗಳು ಹಾಗೂ ಸಿಹಿ ತಿಂಡಿಗಳಿಗೆ ಮುಗಿ ಬಿದ್ದು ತೆಗೆದುಕೊಂಡರು .ಮಕ್ಕಳ ಸಂತೆಯಲ್ಲಿ ಸುವರ್ಣ ಗೆಡ್ಡೆ, ಕೆಸವಿನ ಗೆಡ್ಡೆ,ಗೆಣಸು ಹಾಗೂ ಕುಂಬಳಕಾಯಿ ಗ್ರಾಹಕರ ಆಕರ್ಷಣೆಯಾಗಿತ್ತು.ಈ ವಾತಾವರಣದಲ್ಲಿ ಸಿಗುವ ನಾಡಕಿತ್ತಲೇ, ಸಪೋಟ ಹಾಗೂ ಚಕ್ಕೋತ ಹಣ್ಣು ಗಮನ ಸೆಳೆದವು, ಮನೆಯಲ್ಲಿ ಮಾಡಿದ ಚಕ್ಕುಲಿ,ಕೋಡುಬಳೆ, ಹಾಗೂ ವಿವಿಧ ಬಗೆಯ ಸಿಹಿ ತಿಂಡಿಗಳು ಸಂತೆಗೆ ಪೋಷಕರೊಡನೆ ಬಂದಿದ್ದ ಮಕ್ಕಳಿಗೆ ಅತಿ ಪ್ರಿಯವಾಗಿದ್ದವು. ಬಿಸಿಲಿನ ತಾಪವನ್ನು ಕಡಿಮೆ ಮಾಡಲೆಂದೇ ಮಜ್ಜಿಗೆ ಹಾಗು ನಿಂಬೆ ಹಾಗೂ ಎಳ್ಳಿಕಾಯಿ ಜ್ಯೂಸು ಸಂತೆಯಲ್ಲಿ ಅತ್ಯಂತ ಹೆಚ್ಚು ಬೇಗ ವ್ಯಾಪಾರದಲ್ಲಿ ಖಾಲಿಯಾದವು.
ಶುಕ್ರವಾರಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯ ಶಿಕ್ಷಣ ಸಂಸ್ಥೆ ಎಲ್ಲಾ ರೀತಿಯ ಅಗತ್ಯ ವಸ್ತುಗಳು ಒಂದೇ ಕಡೆ ಸಿಗುವಂತೆ ಕಾರ್ಯಕ್ರಮವನ್ನು ಆಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ವ್ಯವಹಾರದ ಜ್ಞಾನವನ್ನು ಮೂಡಿಸುವ ನೂತನ ಪ್ರಯತ್ನಕ್ಕೆ ಗ್ರಾಮಸ್ಥರು, ಗ್ರಾಹಕರು ಶ್ಲಾಘನೆ ವ್ಯಕ್ತಪಡಿಸಿದರು
