ಆಲೂರು : ರಾಜ್ಯವು ಶೈಕ್ಷಣಿಕ, ಅರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಮಠಗಳ ಕೊಡುಗೆ ಅಪಾರ’ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಸಂಕಲಾಪುರ ಮಠದ ಝಾನ್ಸಿ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಜಾತಿಬೇಧವಿಲ್ಲದೆ ಸರ್ವರಿಗೂ ಶಿಕ್ಷಣ ನೀಡುವ ಮೂಲಕ ಅಕ್ಷರ ದಾಸೋಹದಲ್ಲಿ ತೊಡಗಿರುವ ಮಠಗಳು ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ.ಆರೋಗ್ಯಕರ ಸಮಾಜ ನಿರ್ಮಾಣವಾಗಲು ನಾಡಿನ ಮಠಾಧೀಶರ ಸಲಹೆ, ಸೂಚನೆ, ಮಾರ್ಗದರ್ಶನ ಅಗತ್ಯವಾಗಿದೆ. ಇಲ್ಲಿನ ಶ್ರೀಗಳು ಈ ಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಜಾಗೃತಿ ಮೂಡಿಸುವುದರ ಜತೆಗೆ ಶಿಕ್ಷಣಕ್ಕೆ ಆದ್ಯತೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ. ಅವರ ಕೆಲಸಗಳಿಗೆ ಭಕ್ತರು ಅಗತ್ಯ ಸಹಾಯ ನೀಡುತ್ತಿರುವುದು ಹೊಸ ಬೆಳವಣಿಗೆಯಾಗಿದೆ ಎಂದರು.ಯಾವುದೇ ಜಾತಿ, ಮತ, ಪಂಥದ ಬೇಧವಿಲ್ಲದೆ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಪ್ರಸಾದ ಸಹಿತ ಶಿಕ್ಷಣ ನೀಡುತ್ತಿರುವ ಸಿದ್ಧಗಂಗಾ ಮಠ ಬಡ ವಿದ್ಯಾರ್ಥಿಗಳ ಪಾಲಿನ ಬೆಳಕಿನಂತಿದೆ.ವಿದ್ಯಾರ್ಥಿಗಳು ಈಗಿನಿಂದಲೇ ತಮ್ಮ ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರ ಪ್ರೇಮ,ರಾಷ್ಟ್ರಭಕ್ತಿ, ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಇದೆ ವೇಳೆ ಶಾಲಾ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬಹುಮಾನ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಸಂಕಲಾಪುರ ಮಠದ ನೂತನ ಉತ್ತರಾಧಿಕಾರಿಯಾಗಿ ನೇಮಕಗೊಂಡ ಶಾಂತವೀರ ಮಲ್ಲಿಕಾರ್ಜುನ ಸ್ವಾಮಿಗಳು. ಪ್ರಧಾನ ಭಾಷಣಕಾರರಾದ ರುದ್ರೇಶ್, ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಖಜಾಂಚಿ ಎಂ.ಪಿ ಕಾಂತರಾಜ್, ತಾಲೂಕು ಶಿಕ್ಷಣ ಸಂಯೋಜಕರಾದ ದಿವಾಕರ್, ಜಾನ್ಸಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಚಿಕ್ಕೋಟೆ ಮಹೇಶ್,ಕಾರ್ಯದರ್ಶಿ ಕೆ.ಆರ್ ಕಾಂತರಾಜ್, ಸದಸ್ಯರಾದ ಆನಂದ್ ನಿಂಗರಾಜ್ ಸೇರಿದಂತೆ ಶಾಲಾ ಆಡಳಿತ ಮಂಡಳಿ ಪೋಷಕರು ಉಪಸ್ಥಿತರಿದ್ದರು.




